ಪುಣ್ಯ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ದೂಮ್ ೫ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಆರ್.ಟಿ.ನಗರದ ಶಿರಡಿ ಸಾಯಿ ದೇವಸ್ಥಾನದಲ್ಲಿ ನೆರವೇರಿತು. ಕೆ.ಎಸ್.ಪುಟ್ಟಣ್ಣಯ್ಯ, ಗೋಪಾಲಯ್ಯ(ಶಾಸಕರು), ಕೆ.ಎನ್.ಜಗದೀಶ್(ಜಯ ಕರ್ನಾಟಕ), ಒರಟ ಪ್ರಶಾಂತ್, ಸಾಯಿಕೃಷ್ಣ ಅವರು ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಪ್ರತೀಕ್ ಗೌಡ ಹಾಗೂ ರಘು ಅವರ ಸಹ ನಿರ್ಮಾಣವಿರುವ ಈ ಚಿತ್ರವನ್ನು ಪವನ್ಕುಮಾರ್ ಎಂ.ಎಸ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಹಾಡುಗಳನ್ನು ಪವನ್ಕುಮಾರ್ ಅವರೆ ಬರೆದಿದ್ದಾರೆ. ಅರುಣ್ ಆಂಡ್ರ್ಯು ಸಂಗೀತ ನಿರ್ದೇಶನ, ರಾಜರತ್ನ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾಸ್ಮಾದ ಸಾಹಸ ನಿರ್ದೇಶನ ಹಾಗೂ ಸೂರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವಿಶೃತ್ ರಾಜ್(ಒರಟ ಪ್ರಶಾಂತ್ ಸಹೋದರ), ಅನಿಲ್, ಮೋಹನ್, ಆದರ್ಶ, ದಕ್ಷಿಣ್ ಐದು ಜನ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸಂಜನ, ವಿಂದ್ಯಾ, ರಾಕ್ಲೈನ್ ಸುಧಾಕರ್, ಪ್ರದೀಪ್ ರಾಜ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಒರಟ ಪ್ರಶಾಂತ್ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.